
ಅದು ಕಡು ಬಡವರು,ಅಸಹಾಯಕರು, ನಿರ್ಗತಿಕರು ಬರುವ ಸರ್ಕಾರಿ ಜಿಲ್ಲಾಸ್ಪತ್ರೆ, ಅಲ್ಲಿ ಬರುವ ರೋಗಿಗಳಿಗೆ ಉಚಿತ ಸೇವೆ ಸಿಗಬಹುದು ಆದರೆ ರೋಗಿಗಳಿಗೆ ಹಾಗೂ ರೋಗಿಗಳನ್ನ ಹಾರೈಕೆ ಮಾಡಲು ಬರುವ ಜನರಿಗೆ ಉಚಿತ ಊಟ ಸಿಗೋದಿಲ್ಲ ಹಾಗಾಗಿ ರೋಗಿಗಳನ್ನು ನೋಡಿಕೊಳ್ಳುವ ಜನರಿಗೆ ಊಟ ಕೊಡಬೇಕೆಂದು ವಾಸವಿ ಅನ್ನದಾನ ಸೇವಾ ಟ್ರಸ್ಟ್ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿದ ಸೇವೆಗೆ ಮೂರು ವರ್ಷ ತುಂಬಿದೆ.
ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆ ಎಸ್.ಎನ್.ಆರ್ ಗೆ ಬರುವ ಬಹುತೇಕ ಜನರು ಕಡುಬಡವರು ಸಂಕಷ್ಟದಲ್ಲಿರುವವರು, ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆ ಸೇರಿದಂತೆ ವಿವಿದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಊಟ ಕೊಡಲಾಗುತ್ತದೆ. ಆದರೆ ರೋಗಿಗಳನ್ನು ಹಾಗೂ ಬಾಣಂತಿಯರನ್ನು ನೋಡಿಕೊಳ್ಳಲು ಬರುವ ಜನರು ಇಲ್ಲಿ ಊಟಕ್ಕಾಗಿ ಪರದಾಡಬಾರದು ಎಂದು ಕೋಲಾರದ ಶ್ರೀ ವಾಸವಿ ಅನ್ನದಾನ ಸೇವಾ ಟ್ರಸ್ಟ್ ನವರು ಆರಂಭಿಸಿದ ಅನ್ನದಾನ ಸೇವೆ ಇವತ್ತಿಗೆ ಮೂರು ವರ್ಷ ತುಂಬಿದೆ.
ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿದ ಅನ್ನದಾನ ಸೇವೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಇಂದು ಮೂರು ವರ್ಷ ಕಳೆದ ಹಿನ್ನೆಲೆಯಲ್ಲಿ ವಾಸವಿ ಸೇವಾಟ್ರಸ್ಟ್ ನ ಅಧ್ಯಕ್ಷರಾದ ಗೋವಿಂದರಾಜು ಹಾಗೂ ಪದಾದಿಕಾರಿಗಳು ಇಂದು ವಿಶೇಷವಾದ ಊಟ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿದ ಗೋವಿಂದರಾಜು ಅವರು ನಮ್ಮ ಟ್ರಸ್ಟ್ ಆರಂಭಿಸಿದ ಸೇವೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಅದಕ್ಕೆ ಹಲವು ಜನರು ಕೈಜೋಡಿಸಿದ್ದು ಇದರ ಸೇವೆ ವಿಸ್ತರಣೆಯಾಗಬೇಕಿದೆ, ದೇವರು ಶಕ್ತಿ ಕೊಟ್ಟರೆ ಇದನ್ನು ಮತ್ತಷ್ಟು ಕಡೆ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.
ಇದೇ ವೇಳೆ ಮೂರು ವರ್ಷದ ವಾಸವಿ ಅನ್ನದಾನ ಸೇವಾ ಟ್ರಸ್ಟ್ ನ ಹೆಸರಿನಲ್ಲಿ ತಯಾರಿಸಿದ್ದ ಕೇಕ್ ಕತ್ತರಿಸಿ ಈ ಸೇವೆ ಮೂರು ವರ್ಷ ಹೀಗೆ ನಿರಂತರವಾಗಿ ನಡೆದುಕೊಂದು ಬರಲು ನೆರವಾದ ಎಲ್ಲರಿಗೂ ಕೃತಜ್ನತೆಗಳನ್ನು ಅರ್ಪಿಸಿದರು.ಪ್ರತಿದಿನ ಇಲ್ಲಿಗೆ ಬರುವ ಜನರಿಗೆ ರುಚಿಯಾದ ಶುಚಿಯಾದ ಊಟವನ್ನು ತಯಾರಿಸಿ ನೀಡಲಾಗುತ್ತಿದೆ. ಯಾವುದೇ ಹಣವನ್ನು ಸ್ವೀಕರಿಸದೆ, ನಿತ್ಯವೂ ವಾಸವಿ ಅನ್ನದಾನ ಸೇವಾ ಟ್ರಸ್ಟ್ನ ಸಿಬ್ಬಂದಿಗಳೇ ಆಸ್ಪತ್ರೆಯ ಪ್ರತಿ ವಾರ್ಡ್ಗಳಿಗೆ ಬೇಟಿ ನೀಡಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಯ ಪೊಷಕರಿಗೆ ಟೋಕನ್ ನೀಡಿ ಊಟಕ್ಕೆ ಬರುವಂತೆ ಅವರೇ ಸ್ವಾಗತ ಮಾಡಿ ನಂತರ ಊಟಕ್ಕೆ ಬರುವ ಜನರಿಗೆ ತಾವೇ ನಿಂತು ಹೊಟ್ಟೆ ತುಂಬ ಊಟ ಬಡಿಸುತ್ತಾರೆ ಹೀಗೆ ಪ್ರತಿನಿತ್ಯ 80 ರಿಂದ 100 ಜನರಿಗೆ ಪ್ರತಿನಿತ್ಯ ಅನ್ನ, ಸಾಂಬಾರ್, ಮಜ್ಜಿಗೆ, ಉಪ್ಪಿನಕಾರಯಿ, ಪಾಯಸ ಮಾಡಿ ಬಡಿಸುತ್ತಾರೆ.
ಇನ್ನು ವಾಸವಿ ಅನ್ನದಾನ ಸೇವೆ ಟ್ರಸ್ಟ್ ಕೇವಲ ಕೋಲಾರ ಜಿಲ್ಲಾಸ್ಪತ್ರೆಯೊಂದರಲ್ಲೇ ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆಯಲ್ಲೂ ಸಹ ಇದೇ ರೀತಿಯ ಸೇವೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಇನ್ನು ವಾಸವಿ ಅನ್ನದಾನ ಸೇವಾ ಟ್ರಸ್ಟ್ ಸೇವೆಯನ್ನು ಶ್ಲಾಘಿಸಿ ಕೋಲಾರ ಜಿಲ್ಲಾಡಳಿತ ಟ್ರಸ್ಟ್ ನ ಅಧ್ಯಕ್ಷರಾದ ಗೋವಿಂದರಾಜು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದೆ. ಇವತ್ತು ವಿಶೇಷವಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಟ್ರಸ್ಟ್ ಅಧ್ಯಕ್ಷರಾದ ಗೋವಿಂದರಾಜು ಸೇರಿದಂತೆ ಪದಾದಿಕಾರಿಗಳು ವಿಶೇಷ ಅಡುಗೆ ಮಾಡಿ ಬಡಿಸಿ ಸಂತಸ ಪಟ್ಟರು.
ಈ ವೇಳೆ ಬೆಂಗಳೂರು ವಾಸವಿ ಅನ್ನದಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಪತ್ತಿ ಸೀತಾರಾಮಯ್ಯ, ಟಿವಿ9 ಜಿಲ್ಲಾ ಪ್ರತಿನಿಧಿ ರಾಜೇಂದ್ರಸಿಂಹ, ಬಾಲರಾಜು, ದೇವತಾ ನಾಗರಾಜ್, ಬೆಮೆಲ್ ರಮೇಶ್, ಕಾಂತಿ, ಶ್ರೀನಿವಾಸ್ ಬಾಬು, ಎಂ.ಆರ್.ಎಸ್ ಶ್ರೀನಿವಾಸಮೂರ್ತಿ, ಬದ್ರಿನಾಥ್, ಸುರೇಶ್ ಬಾಬು, ಕೋರ್ಟ್ ಆನಂದ್, ಅಮರನಾಥ್, ಓಂ ಪ್ರಕಾಶ್, ರಮೇಶ್. ಜಿ.ಆರ್.ಪ್ರಶಾಂತ್, ರಾಘವೇಂದ್ರ ಬಾಲಾಜಿ, ವಿಜಯ್ ಕುಮಾರ್, ವೀರೇಂದ್ರ ಕುಮಾರ್, ಬಿ.ಎನ್.ಪ್ರಭಾಕರ್, ಕೆ.ಎಸ್.ಬಾಲಾಜಿ. ವೀರೇಂದ್ರಕುಮಾರ್, ವಿ.ಎನ್.ನಾಗೇಶ್ ಬಾಬು, ಜಗನ್ನಾಥ್, ರಂಗರಾಜು ಸೇರಿದಂತೆ ಹಲವು ಹಾಜರಿದ್ದರು.