ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಿನ್ನದ ನಾಡಿನ ಹುಡುಗಿ ಆಯ್ಕೆ

ಕೋಲಾರ: ಜನವರಿ-26-2025 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾರದ ಯುವತಿಯೊಬ್ಬಳು ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. ಆ ಮೂಲಕ ಚಿನ್ನದ ನಾಡು ಕೋಲಾರಕ್ಕೂ ಕೀರ್ತಿಯನ್ನು ತಂದುಕೊಟ್ಟಿದ್ದಾಳೆ.

ಹೌದು ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೇಶದ ಗಮನ ಸೆಳೆಯುವ ಗಣರಾಜ್ಯೋತ್ಸವ ಫೆರೆಡ್​ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ವರ್ಷ ಚಿನ್ನದ ನಾಡಿನ ಗಾಯಕಿ ಎನ್‌ಸಿಸಿ ಕೆಡೆಟ್‌ ಕೋಲಾರದ ಕೆ.ಎಂ.ಶ್ರುತಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರದಲ್ಲಿ ಮುಖ್ಯ ಗಾಯಕಿ ಅಂದರೆ ಲೀಡ್‌ ಸಿಂಗರ್‌ ಆಗಿ ಶ್ರುತಿಗೆ ಅವಕಾಶ ಸಿಕ್ಕಿದೆ. ಶ್ರುತಿ ಎನ್‌ಸಿಸಿ ಬೆಂಗಳೂರು ಗ್ರೂಪ್‌ ‘ಎ’ನಿಂದ ಆಯ್ಕೆಯಾಗಿದ್ದು, ಇವರು ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ.

ಆಯ್ಕೆಯಾಗಿದ್ದು ಹೇಗೆ ಯಾರಿದು ಶ್ರುತಿ..!
ಕೆ.ಎಂ.ಶ್ರುತಿ ಕೋಲಾರದ ಎನ್‌.ಮಹದೇವ್‌. ಹಾಗೂ ಸಿ.ಎನ್‌.ಕಸ್ತೂರಿ ಅವರ ಮಗಳು. ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಕಸ್ತೂರಿ ಅವರ ಮೊದಲ ಪುತ್ರಿ. ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಇನ್ಸ್​ಟ್ಯೂಟ್​ ಆಫ್​ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್​ ಸೈನ್ಸ್ ವಿಭಾಗದಲ್ಲಿ ಬಿ.ಇ. ಐದನೇ ಸೆಮಿಸ್ಟರ್‌ ಓದುತ್ತಿದ್ದಾರೆ. ಅದರ ಜೊತೆಗೆ ಎನ್‌ಸಿಸಿ ಕೆಡೆಟ್ ಕೂಡಾ ಆಗಿದ್ದಾರೆ. ಶ್ರುತಿ ಕೋಲಾರದ ಸುವರ್ಣ ಸೆಂಟ್ರಲ್‌ ಶಾಲೆಯಲ್ಲಿ ಹೈಸ್ಕೂಲ್​ ವರೆಗು ವಿದ್ಯಾಬ್ಯಾಸ ಮಾಡಿ ನಂತರ, ವಿದ್ಯಾಜ್ಯೋತಿ ಶಾಲೆಯಲ್ಲಿ ಪಿಯುಸಿ ಮುಗಿಸಿ ನಂತರ ಅಂಬೇಡ್ಕರ್ ಕಾಲೇಜಿನಲ್ಲಿ ಎಂಜಿನಿಯರಿಂಗ್​ಗೆ ಸೇರಿದ್ದಾರೆ. ಕಳೆದ ಒಂದು ವರ್ಷದ ಹಿಂದಷ್ಟೇ ಶ್ರುತಿ ಎನ್​ಸಿಸಿಗೆ ಸೇರಿದ್ದರು.

ಕಳೆದ ‘ಆರು ತಿಂಗಳಿಂದ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಂತರ ಈ ಅವಕಾಶ ಶ್ರುತಿ ಅವರ ಪಾಲಿಗೆ ಒಲಿದು ಬಂದಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ಎನ್‌ಸಿಸಿ ಕೆಡೆಟ್‌ಗಳಿದ್ದಾರೆ. ಅವರಲ್ಲಿ ಶ್ರುತಿ ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿಯಾಗಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ- ಗೋವಾ ಎನ್‌ಸಿಸಿ ನಿರ್ದೇಶನಾಲಯದಿಂದ ಶ್ರುತಿ ಸೇರಿದಂತೆ ಒಟ್ಟು 124 ಕೆಡೆಟ್‌ಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಆ ಪೈಕಿ ಇದೇ ಡಾ.ಬಿ.ಆರ್‌.ಅಂಬೇಡ್ಕರ್‌ ಎಂಜಿನಿಯರಿಂಗ್​ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಎನ್‌.ವಿಶ್ವಾಸ್‌ ಅವರು ಕೂಡಾ ಪಿ.ಎಂ ರ‍್ಯಾಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶ್ರುತಿಗೆ ತಾಯಿಯೇ ಗುರು..! ಈ ಬಗ್ಗೆ ಶ್ರುತಿ ಹೇಳೋದೇನು..!ಹೌದು ಗಣರಾಜ್ಯೋತ್ಸವ ಪೆರೆಡ್​ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲೀಡ್​ ಸಿಂಗರ್ ಆಗಿ ಅವಕಾಶ ಪಡೆದುಕೊಂಡಿರುವ ಶ್ರುತಿ ಅವರಿಗೆ ತಾಯಿ ಕಸ್ತೂರಿ ಅವರೇ ಗುರು. ತಾಯಿ ಸಂಗೀತ ಶಿಕ್ಷಕಿಯಾಗಿದ್ದು ತಾಯಿಯ ಪ್ರೇರಣೆಯಿಂದಲೇ ತಾನು ಸಂಗೀತದಲ್ಲಿ ಈಸಾಧನೆ ಮಾಡಲು ಸಾಧ್ಯವಾಗಿದೆ. ಸಂಗೀತದಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ ಮಾಡಿರುವ ಶ್ರುತಿ, ಸದ್ಯ ವಿದ್ವತ್‌ ಕಲಿಯುತ್ತಿದ್ದಾರೆ. ಹಲವು ಸ್ಥಳೀಯ ಸಂಗೀತ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿರುವ ಶ್ರುತಿ ಅವರಿಗೆ ಇದು ಜೀವನದಲ್ಲಿ ಮರೆಯಲಾಗರದ ಕ್ಷಣ ಅನ್ನೋದು ಶ್ರುತಿ ಅವರ ಮಾತು.

ಇನ್ನು ದೇಶದ ಪ್ರತಿಷ್ಠೆಯ ಸಂಕೇತ ಎನ್ನುವ ರೀತಿಯಲ್ಲಿ ಗಣರಾಜ್ಯೋತ್ಸವ ಫೆರೆಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೇಶ ಹಾಗೂ ವಿದೇಶಗಳ ಗಮನ ಸೆಳೆಯುತ್ತದೆ. ಅಲ್ಲಿ ವಿಶೇಷ ಆಕರ್ಷಣೆಯಾಗಿ, ಧ್ವಜವಂದನೆ, ಪಿ.ಎಂ ರ‍್ಯಾಲಿ, ಆಕರ್ಶಕ ಪೆರೇಡ್‌, ವಾಯುಸೇನೆ, ನೌಕಾಸೇನೆ, ಭೂಸೇನೆಯ ವಿವಿಧ ವಿಭಾಗಗಳ ಕಸರತ್ತು, ಅದರ ಜೊತೆಗೆ ಅತ್ಯಾಕರ್ಶಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯುತ್ತವೆ. ಇಂಥಾದೊಂದು ಕಾರ್ಯಕ್ರಮಗಳನ್ನು ನಾವು ಮನೆಯಲ್ಲಿ ಕೂತು ಟಿವಿ ಅಥವಾ ಪೇಪರ್​ನಲ್ಲಿ ನೋಡುತ್ತಿದ್ದೆವು, ಈಗ ರಾಷ್ಟ್ರಪತಿ, ಪ್ರಧಾನ ಮಂತ್ರಿ ಅವರ ಎದುರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿರುವ ಬಹಳ ಖುಷಿ ತಂದಿದೆ, ಇದು ನನ್ನ ಜೀವನದ ಅತ್ಯಂತ ಮಹತ್ವಪೂರ್ಣ ಕ್ಷಣ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಅನ್ನೋದು ಶ್ರುತಿ ಅವರ ಮಾತು.

ಸದ್ಯ ಕಾರ್ಯಕ್ರಮದ ನಿಮಿತ್ತ ಈಗಾಗಲೇ ಶ್ರುತಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ನಡೆಯುವ ಪೂರ್ವಬಾವಿ ತಾಲೀಮು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಒಟ್ಟಾರೆ ಚಿನ್ನದ ನಾಡು ಕೋಲಾರ ಯವತಿಯೊಬ್ಬಳು ದೇಶದ ಹೆಮ್ಮಯ ಪ್ರತೀಕ ಗಣರಾಜ್ಯೋತ್ಸವ ಪೆರೇಡ್​ ಹಾಗೂ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರವೇ ಸರಿ.

Leave a Reply

Your email address will not be published. Required fields are marked *