ಮದನಹಳ್ಳಿ ನೂತನ ಗ್ರಾಮ ಪಂಚಾಯಿತಿ ಉದ್ಘಾಟನೆ ಕಾರ್ಯಕ್ರಮ

ಕೋಲಾರ: ತಾಲೂಕು ವ್ಯಾಪ್ತಿಯ ಮದನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನ ಮತ್ತು ಗ್ರಾಮ ಪಂಚಾಯಿತಿಯ ಇತರೆ ಯೋಜನೆಯಡಿಯಲ್ಲಿ ಅಂದಾಜು 65 ಲಕ್ಷ ರೂಗಳಲ್ಲಿ ನಿರ್ಮಾಣವಾದ ನೂತನ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಬುಧವಾರದಂದು ಬೆಳಿಗ್ಗೆ ಶ್ರೀನಿವಾಸಪುರ ಶಾಸಕರಾದ ಜಿಕೆ ವೆಂಕಟ ಶಿವಾರೆಡ್ಡಿ ಅವರು ಉದ್ಘಾಟನೆ ನೆರವೇರಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಶಾಸಕರಾದ ಜಿಕೆ ವೆಂಕಟ ಶಿವಾರೆಡ್ಡಿ ಅವರು ಮಾತನಾಡಿ ಸುಗಟೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಹೆಚ್ಚಿನ ಶ್ರಮ ಹಾಕಿದ್ದೇನೆ. ಪ್ರತಿಯೊಂದು ಹಳ್ಳಿಯಲ್ಲೂ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಗೆ ನೂರಕ್ಕೆ ನೂರರಷ್ಟು ಒತ್ತು ನೀಡಿದ್ದೇನೆ. ಈಗಾಗಲೇ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಂಡಿದ್ದೇನೆ. ನನ್ನ ಅನುದಾನದಲ್ಲಿ ಹೆಚ್ಚಿನ ಹಣ ದೇವಸ್ಥಾನದ ಕಾಮಗಾರಿಗಳಿಗೆ ಕೊಟ್ಟಿದ್ದೇನೆ.

ದಿನದ 24 ಘಂಟೆಗಳ ಕಾಲ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತೇನೆ. ಪ್ರತಿಯೊಂದು ಹೋಬಳಿಗೂ ಭೇಟಿ ನೀಡಿ ಸರಿಸಮ ಅಭಿವೃದ್ಧಿ ಕೆಲಸಗಳು ಮಾಡುವ ಮನಸ್ಸು ನನ್ನದು. ನನ್ನ ಹೃದಯದಲ್ಲಿ ಯಾವುದೇ ಕಲ್ಮಶ ಇಲ್ಲ. ಹಾಗಾಗಿ ಈ ಭಾಗದ ಜನರಿಗೆ ಹೇಳುತ್ತೆನೆ ನಿಮ್ಮ ಕೆಲಸ ಯಾವುದೇ ಇರಲಿ ಪಕ್ಷ ಭೇದ ಬಿಟ್ಟು ನನ್ನ ಗಮನಕ್ಕೆ ತನ್ನಿ. ನಿಮ್ಮಗಳ ಸೇವೆ ಮಾಡಲು ಸಿದ್ದನಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಂ ಎಲ್ ಅನಿಲ್ ಕುಮಾರ್ ಮಾತನಾಡಿ ದಿವಂಗತ ಬೈರೇಗೌಡ ಅವರಿಂದ ಮದನಹಳ್ಳಿಗೆ ಸರ್ಕಾರಿ ಆಸ್ಪತ್ರೆ, ಮುಜುರಾಯಿ ಶಾಲೆ, ಗ್ರಾಮ ಪಂಚಾಯಿತಿ ಭಾಗ್ಯ ಬಂದಿತು. ಇವತ್ತಿನ ದಿನ ಈ ಮದನಹಳ್ಳಿ ಅಭಿವೃದ್ಧಿಯಾಗುತ್ತಿದೆ ಎಂದರೆ ಅದಕ್ಕೆ ಅವರೇ ಕಾರಣಕರ್ತರು. ಕಟ್ಟಡ ಕಾಮಗಾರಿಗೆ ನನ್ನ ಅನುದಾನದಲ್ಲಿ 10 ಲಕ್ಷ ನೀಡಿದ್ದೇನೆ. ಕಟ್ಟಡದ ಮೇಲ್ಬಾಗ ನಿರ್ಮಾಣದ ಬೇಡಿಕೆ ತಿಳಿಸಿದ್ದಾರೆ. ಆ ಕಾಮಗಾರಿಗೂ ನನ್ನ ಅನುದಾನದಲ್ಲಿ ಹಣ ನೀಡುತ್ತೇನೆ. ಇದು ನಾನು ಹುಟ್ಟಿ ಬೆಳೆದ ಊರು. ಇದರ ಅಭಿವೃದ್ಧಿ ಜವಾಬ್ದಾರಿ ನನ್ನ ಮೇಲೆಯೂ ಸಹ ಇದೆ. ಹಾಗಾಗಿ ಅಭಿವೃದ್ಧಿ ವಿಚಾರಕ್ಕೆ ಬಂದರೆ ಸದಾ ನನ್ನ ಸಹಕಾರ ಇದ್ದೆ ಇರುತ್ತದೆ ಎಂದು ಹೇಳಿದರು.

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಹಾರ ಹಾಕುವ ಜೈಕಾರ ಕೂಗುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಎಂ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದ ರಾಜು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಕೆ ಮಹೇಶ್, ತಾಲೂಕು ಪಂಚಾಯಿತಿ ಇಒ ಮಂಜುನಾಥ್, ಮದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ವೆಂಕಟ ರತ್ನಮ್ಮ, ಅಭಿವೃದ್ಧಿ ಅಧಿಕಾರಿ ಅನುರಾಧ ಕೆ, ಐತರಾಸನಹಳ್ಳಿ ಪಿಡಿಒ ಸತೀಶ್, ಹರಟಿ ಪಿಡಿಒ ನಾಗರಾಜ್, ಸೆಕೆಟ್ರಿ ಎನ್ ಕೆ ನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಕಾಶ್, ರಾಜಣ್ಣ, ವಿಜಿಕುಮಾರ್, ದೇವರಾಜ್, ವೆಲಗ ಬುರ್ರೆ ವೆಂಕಟ ರತ್ನಮ್ಮ, ವೆಂಕಟೇಶ್ ಗೌಡ, ಪಂಚಾಯಿತಿ ಸಿಬ್ಬಂದಿಗಳು, ಜಲಗಾರರು ಸೇರಿದಂತೆ ಗ್ರಾಮಸ್ಥರು ಇತರರು ಇದ್ದರು.

Leave a Reply

Your email address will not be published. Required fields are marked *