ಕೋಲಾರ: ನಗರಸಭೆಯ ನಾಮಿನಿ ಸದಸ್ಯರಾಗಿ ನೇಮಕವಾಗಿರುವ ಗಂಗಮ್ಮನ ಪಾಳ್ಯದ ರಾಮಯ್ಯ ಅವರನ್ನು ಗಂಗಮ್ಮನ ಪಾಳ್ಯ ನಿವಾಸಿಗಳು ಮತ್ತು ಅಭಿಮಾನಿಗಳು ಸನ್ಮಾನಿಸಿದರು.
ನಲ್ಲಗಂಗಮ್ಮ ಸೇವಾ ಸಮಿತಿಯಿಂದ ನಗರದ ಗಂಗಮ್ಮನ ಪಾಳ್ಯದಲ್ಲಿರುವ ಗಂಗಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎಸ್ ಸಿ ವಿಭಾಗದ ನಗರ ಬ್ಲಾಕ್ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ರಾಮಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಮತ್ತು ನಾಮಿನಿ ಸದಸ್ಯರಾದ ಅಮರ್ ಅವರಿಗೆ ಸನ್ಮಾನ ಮಾಡಿದರು. ಈ ವೇಳೆ ರಾಮಯ್ಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಯ್ಯ ಅವರು, ಸುಮಾರು 25 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಪಕ್ಷವೂ ಸಹ ನನ್ನ ಸಮಾಜಮುಖಿ ಕೆಲಸಗಳನ್ನು ಗುರ್ತಿಸಿ ಹಲವು ಜವಾಬ್ದಾರಿಯನ್ನು ನೀಡಿದೆ. ಈಗ ನಗರಸಭೆಯ ನಾಮಿನಿ ಸದಸ್ಯರಾಗಿ ನನ್ನನ್ನು ಆಯ್ಕೆ ಮಾಡಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೆ, ಪಕ್ಷದ ಮುಖಂಡರಿಗೆ ಹಾಗೂ ಗಂಗಮ್ಮನ ಪಾಳ್ಯದ ನಿವಾಸಿಗಳಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಚಂದ್ರಶೇಖರ್, ಮುನಿರಾಜು, ಮಹದೇವಪ್ಪ, ಗೋವಿಂದರಾಜು, ನಾರಾಯಣ ಸ್ವಾಮಿ, ಚಂದ್ರಣ್ಣ, ಮುರಳಿ, ಪ್ರಸಾದ್, ಶಿವು, ಮನೋಜ್, ವೇಣು, ಬಾಲಾಜಿ, ನವೀನ್, ಮಧು ಮುಂತಾದವರು ಇದ್ದರು.