
ಕೋಲಾರ: ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಯುವ ಘಟಕದ ವಿವಿಧ ಪದಾಧಿಕಾರಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಭರತ್ ಕೃಷ್ಣ ದೇವರಾಯ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಳೆದ ವರ್ಷ ಆನ್ ಲೈನ್ ಮುಖಾಂತರ ನಡೆದ ಅಂತರಿಕ ಚುನಾವಣೆಯಲ್ಲಿ ಭರತ್ ಕೃಷ್ಣ ದೇವರಾಯ ತೀವ್ರ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ.
ಭರತ್ ರವರ ತಂದೆ ಕೃಷ್ಣ ದೇವರಾಯರ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ. ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕುಡಾ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಮತ್ತು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇವರ ಹಾದಿಯಲ್ಲಿಯೇ ಜನಸೇವೆ ಮಾಡಲು ಬಂದಿರುವ ಭರತ್ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿವೈಸಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ಕೃಷ್ಣ ದೇವರಾಯ ಮಾತನಾಡಿ, ಜಿಲ್ಲೆಯ ಜನತೆಯ, ನನ್ನ ರಾಜಕೀಯ ಗುರುಗಳಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರ ಆಶೀರ್ವಾದ ಹಾಗೂ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಜವಾಬ್ದಾರಿಯುತ ಸ್ಥಾನ ಲಭಿಸಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಹಿರಿಯ ಮತ್ತು ಕಿರಿಯ ಮುಖಂಡರು ಕಾರ್ಯಕರ್ತರು ಚುನಾಯಿತ ಜನಪ್ರತಿನಿಧಿಗಳ ಬೆಂಬಲದಿಂದಾಗಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ ಎಂದರು.
ಸರ್ಕಾರದ ಯೋಜನೆಗಳನ್ನು ಜನಗಳಿಗೆ ತಲುಪಿಸುವ ಕಾಯಕವನ್ನು ಮಾಡುವ ಜೊತೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಿ ಪಕ್ಷವನ್ನು ಕಟ್ಟುವ ಮೂಲಕ ಬಲಿಷ್ಠ ಗೊಳಿಸಲಾಗುವುದು. ಮುಂಬರುವ ಜಿ.ಪಂ, ತಾ.ಪಂ, ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ತೊಡಗಿಕೊಳ್ಳಲಾಗುವುದು ಎಂದು ಹೇಳಿದರು.
ನನ್ನ ಗೆಲುವಿಗೆ ಬೆನ್ನೆಲುಬಾಗಿ ನಿಂತ ಮುಖಂಡರಾದ ಶಶಿಧರ್, ಸುನೀಲ್ ಕುಮಾರ್, ಕಠಾರಿಪಾಳ್ಯ ಗಂಗಣ್ಣ, ನಗರಸಭೆ ಸದಸ್ಯ ಫೈರೋಜ್ ಹಾಗೂ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದರು.