
ಕೋಲಾರ: ಅಧಿಕಾರದ ಆಸೆ ಬಿಟ್ಟು ಪಕ್ಷದ ಸಂಘಟನೆಗೆ ಒತ್ತು ನೀಡಿ, ಪಕ್ಷನಿಷ್ಠೆಯಿಂದ ಪ್ರಾಮಾಣಿವಾಗಿ ಕೆಲಸ ಮಾಡಿದರೆ ಮಾತ್ರವೇ ಅಧಿಕಾರದ ಸ್ಥಾನಮಾನಗಳು ಸಿಗುತ್ತವೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ತಾಲೂಕಿನ ಕಾಮಧೇನಹಳ್ಳಿಯಲ್ಲಿ ಬುಧವಾರ ಜೆಡಿಎಸ್ ತಾಲೂಕು ಘಟಕದಿಂದ ಮುಂಬರುವ ಜಿಪಂ ತಾಪಂ ಹಾಗೂ ಎಪಿಎಂಸಿ ಚುನಾವಣೆ ಮತ್ತು ಪಕ್ಷದ ಪದಾಧಿಕಾರಿಗಳ ಆಯ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ತಮ್ಮ ಗ್ರಾಮಗಳಲ್ಲಿ ಸಮಸ್ಯೆಗಳ ಆಧಾರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಬೇಕಾಗಿದೆ ಹಣ ಬಲವಿದ್ದರೆ ಅಷ್ಟೇ ಸಾಲದು ವಿರೋಧ ಪಕ್ಷಗಳ ತಂತ್ರ ಪ್ರತಿತಂತ್ರಗಳಿಗೆ ಪ್ರತಿರೋಧ ವ್ಯಕ್ತಪಡಿಸವಂತ ನಾಯಕತ್ವ ಗುಣಗಳು ಕಾರ್ಯಕರ್ತರಲ್ಲಿ ಬರಬೇಕು ಪಕ್ಷದ ನಿಷ್ಠೆಗೆ ಮತ್ತು ಸಿದ್ದಾಂತಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಎದುರಿಸುತ್ತಿರುವ ಕಷ್ಟಗಳನ್ನು ರಾಜ್ಯ ಮಟ್ಟದಲ್ಲಿ ಕೂಡ ಚರ್ಚೆ ನಡೆದಿದೆ ಯಾವುದೇ ಒಬ್ಬ ವ್ಯಕ್ತಿಯ ಮತ್ತು ಪಕ್ಷದ ಭಾನವನೆಗಳಿಗೆ ಧಕ್ಕೆಯಾಗದಂತೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಬೇಕು ಅಧಿಕಾರ ಪಡೆದು ನಂಬಿಕೆ ದ್ರೋಹ ಬಗೆದವರಿಗೆ ದೊಡ್ಡ ಮಟ್ಟದಲ್ಲಿ ಉತ್ತರ ನೀಡಬೇಕಾಗಿದೆ ಇದಕ್ಕೆ ಒಗ್ಗಟ್ಟಿನಿಂದ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ ಪಕ್ಷದ ರಾಜ್ಯ ಉಸ್ತುವಾರಿಯ ಆದೇಶದಂತೆ ಸದಸ್ಯತ್ವ ಅಭಿಯಾನ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಅದರಂತೆ ಪ್ರತಿ ಗ್ರಾಮದಲ್ಲಿ ಬೂತ್ ಸಮಿತಿ ಸೇರಿದಂತೆ ಹೋಬಳಿ, ತಾಲೂಕು ಘಟಕಗಳನ್ನು ರಚನೆ ಮಾಡಬೇಕು ಮುಂಬರಲಿರುವ ಪ್ರತಿಯೊಂದು ಚುನಾವಣೆಯಲ್ಲಿ ಸಹ ಗೆಲುವು ಸಾಧಿಸಲು ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಮುಂದಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತರಿಗೆ ಮೊದಲ ಅಧ್ಯತೆ ನೀಡಲಾಗುತ್ತದೆ ಎಂದರು,
ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಬಲಿಷ್ಠವಾಗಿ ಇದ್ದರೂ ಅಧಿಕಾರ ಪಡೆಯುವ ಸಂದರ್ಭದಲ್ಲಿ ಪಕ್ಷವು ತೊಂದರೆಗಳನ್ನು ಅನುಭವಿಸಬೇಕಾಯಿತು ಹಿಂದೆ ಆಗಿರುವ ನೋವು ಸೋಲುಗಳನ್ನು ಬಿಟ್ಟು ಮುಂದೆ ಎಚ್ಚರಿಕೆಯಿಂದ ಪಕ್ಷವನ್ನು ಕಟ್ಟೋಣ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಮಾಡಿ ಅ ಮೂಲಕ ಸಮಿತಿಗಳನ್ನು ಆಯ್ಕೆ ಮಾಡುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಬೇರೆ ಪಕ್ಷಕ್ಕೆ ಹೋದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಛೇರಿ ಕಟ್ಟಲು ಮುಂದಾಗಬೇಕು ಮೈತ್ರಿ ಪಕ್ಷಗಳ ಜಂಟಿ ಸಭೆ ಮಾಡಬೇಕು ಸಹಕಾರಿ ಸಂಘಗಳ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಬಿಡಬೇಕು ಚುನಾವಣೆಯಲ್ಲಿ ಬೂತ್ ಗಳಲ್ಲಿ ವೋಟ್ ಹಾಕಿಸುವವರನ್ಮು ಗುರುತಿಸಬೇಕು ಕೇವಲ ಸಭೆಗಳಲ್ಲಿ ಭಾಷಣ ಮಾಡುವವರನ್ನು ಅಲ್ಲ ಪಕ್ಷದ ಸಿದ್ದಾಂತದಂತೆ ಒಬ್ಬರಿಗೆ ಒಂದು ಹುದ್ದೆ ಜಾರಿ ಮಾಡಿಸಬೇಕು ಎಂದು ನಾಯಕರನ್ನು ಒತ್ತಾಯಿಸಿದರು.
ಸಭೆಯ ಅಧ್ಯಕ್ಷೆ ವಹಿಸದ್ದ ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಮಾತನಾಡಿ ಚುನಾವಣೆಯಲ್ಲಿ ಗೆಲ್ಲಲು ಗ್ರಾಮಗಳಲ್ಲಿ ಸದಸ್ಯತ್ವ ಮಾಡಿಸಿ ಪ್ರತಿ ಹೋಬಳಿ ಮಟ್ಟದಲ್ಲಿ ಘಟಕಗಳನ್ನು ರಚನೆ ಮಾಡಲಾಗುತ್ತದೆ ಪಕ್ಷದಲ್ಲಿ ಸುಮಾರು 21 ವಿವಿಧ ವಿಭಾಗಗಳ ಸಮಿತಿಗಳನ್ನು ರಚಿಸಲಾಗುತ್ತದೆ ಎಲ್ಲರಿಗೂ ಅವಕಾಶವಿದ್ದು ಪಕ್ಷದ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ತಿಳಿಸಿದರು.
ಸಭೆಯಲ್ಲಿ ಮಾಜಿ ಜಿಪಂ ಸದಸ್ಯ ಬಾಲಾಜಿ ಚನ್ನಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಮೂರಂಡಹಳ್ಳಿ ಗೋಪಾಲಪ್ಪ, ಮುಖಂಡರಾದ ಪುಸ್ಥಿ ನಾರಾಯಣಸ್ವಾಮಿ, ಖಾಜಿಕಲ್ಲಹಳ್ಳಿ ಹರೀಶ್, ಮುನಿಸ್ವಾಮಿಗೌಡ, ಮೀನಾಕ್ಷಿ, ರತ್ನಮ್ಮ, ಲೋಕೇಶ್ ಮರಿಯಪ್ಪ, ವಿ.ಕೆ ರಾಜೇಶ್, ಗಿರೀಶ್, ಜೆಟ್ ಅಶೋಕ್, ವಿಜಯ್ ಗೌಡ, ಮುಂತಾದವರು ಇದ್ದರು.